ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ಮಾಡಲು ಮುಂದಾಗಿ -ನಿವೃತ್ತ ನ್ಯಾ. ಸುಭಾಸ ಆಡಿ

0
72

ಹುಬ್ಬಳ್ಳಿ: ಅ.17: ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ( ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಸ ಆಡಿ ಅವರು ಹೇಳಿದರು.

ಇಂದು ಸರ್ಕ್ಯೂಟ್ ಹೌಸ್ ನಲ್ಲಿ ಘನ‌ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಲ್ದಾಣಗಳಲ್ಲಿ ಹಸಿ ಕಸ, ಒಣ ಕಸ ಹಾಕಲು ಕಸದ ಡಬ್ಬಿಗಳನ್ನು ಅಳವಡಿಸಬೇಕು. ಜಿಲ್ಲಾ ಪಂಚಾಯತಿಯ ಐಇಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಮುಂದಾಗಬೇಕಾಗಿದೆ. ರೈಲ್ವೆ ಬೋಗಿ ಹಾಗೂ ಬಸ್ ಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಬೇಕು. ಪ್ರಯಾಣಿಕರು ಕಸವನ್ನು ಕಡ್ಡಾಯವಾಗಿ ಡಬ್ಬಿಗಳಲ್ಲಿ ಹಾಕುವಂತೆ ನಿರ್ವಾಹಕರು ನಿರ್ದೇಶನ ನೀಡಬೇಕು. ಕಸವನ್ನು ಬಸ್ಸಿನ ಕಸದ ಡಬ್ಬಗಳಲ್ಲಿ ಹಾಕದಿದ್ದಲ್ಲಿ ನಿರ್ವಾಹಕರು ದಂಡ ವಿಧಿಸಬಹುದು. ಅಲ್ಲದೇ ಕಿಟಕಿಗಳಲ್ಲಿ ಉಗಳುವುದನ್ನು ನಿಷೇಧ ಮಾಡಬೇಕು. ಕಿಟಕಿಗಳಲ್ಲಿ ಉಗುಳುವವರಿಗೆ ದಂಡ ಹಾಕಬೇಕು. ಕಸವನ್ನು ಬಸ್ ಡಿಪೋಗಳಲ್ಲಿ ಸಂಗ್ರಹಿಸಿ, ಕಸದ ವಾಹನಗಳಿಗೆ ಹಾಕಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು ಒದಗಿಸಬೇಕು. ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಾರ್ಡ್ ಸದಸ್ಯರು ತಮ್ಮ ವಾರ್ಡ್ ಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮುನ್ನೆಡದಾಗ ಮಾತ್ರ ಇಂಧೋರ್ ನಗರದಂತೆ ನಮ್ಮ ಅವಳಿ ನಗರಗಳು ಸ್ವಚ್ಛಂದವಾಗಲಿವೆ ಎಂದು ತಿಳಿಸಿದರು.

ಆಸ್ಪತ್ರೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ ಕಾಲೇಜುಗಳನ್ನು ಹಸಿರು ಆವರಣ ( ಗ್ರೀನ್ ಕ್ಯಾಂಪಸ್) ಮಾಡಲು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಬ್ಲಾಕ್ ಹಾಗೂ ವಾರ್ಡ್ ಗಳ ಪ್ರತಿ ಮನೆಗಳಿಂದ ಮೊದಲು ತ್ಯಾಜ್ಯವನ್ನು ಸಂಗ್ರಹಿಸಿ, ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನಮ್ಮ ನಗರದ ತ್ಯಾಜ್ಯ ನಿರ್ವಹಣೆ ನಮ್ಮ ಕರ್ತವ್ಯ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.‌ ಸಸಿಗಳನ್ನು ನೆಡಲು ಮುಂದಾಗಬೇಕಾಗಿದೆ ಎಂದರು.

ಖಾಲಿ ಜಾಗದಲ್ಲಿ ಕಸವನ್ನು ಹಾಕಲಾಗುತ್ತಿದೆ. ಜಾಗದ ಮಾಲೀಕರು ಖಾಲಿ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲು ಕ್ರಮ ವಹಿಸಬೇಕು. ಅಪಾರ್ಟ್‌ಮೆಂಟ್ ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಜನರಲ್ಲಿ ಅವರ ಜವಾಬ್ದಾರಿ ಕುರಿತು ತಿಳುವಳಿಕೆ ಮೂಡಿಸಬೇಕು. ಸಾರ್ವಜನಿಕ ಸ್ಥಳ, ಫುಟಪಾತ್ ಅತಿಕ್ರಮಣ ಮಾಡಿಕೊಂಡರೆ ಮೊದಲು ನೋಟೀಸ್ ನೀಡಿರಿ. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಿ, ಲೈಸೆನ್ಸ್ ರದ್ದುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೋಟೆಲ್ ಹಾಗೂ ವ್ಯಾಪಾರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬಾರದು. ಅಲ್ಲದೇ ಕಾಟನ್ ಬ್ಯಾಗ್ ಬಳಸುವಂತೆ ಅಧಿಕಾರಿಗಳು ನಿರ್ದೇಶನ ನೀಡುವುದು ಮುಖ್ಯ. ಕಾಟನ್ ಬ್ಯಾಗ್ ನಿಂದಾಗಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಉದ್ಯೋಗಾವಕಾಶ ದೊರೆಯಲಿವೆ. ಡಿಸೆಂಬರ್ ತಿಂಗಳಿನಿಂದ 120 ಮೈಕ್ರಾನ್‌ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಉಪಮೇಯರ್ ಉಮಾ ಮುಕುಂದ ಮಾತನಾಡಿ, ವಾರ್ಡ್ ಗಳಲ್ಲಿ ರಂಗೋಲಿ ಬಿಡಿಸಿ, ಕಸ ಹಾಕದಂತೆ ಜಾಗೃತಿ ಮೂಡಿಸಲಾಗಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು. ನಗರವನ್ನು ಸ್ವಚ್ಛವಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ಫುಟಪಾತ ತೆರವುಗೊಳಿಸಿದರೂ ಸಹ ಪುನಃ ಮೊದಲಿನ ಸ್ಥಿತಿಯಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ದೂರಿದರು.

ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಮಾತನಾಡಿ, 30 ದಿನಗಳಲ್ಲಿ ಬ್ಯಾನರ್, ಪ್ಲೇಕ್ಸ್ ಗಳನ್ನು ತೆರವುಗೊಳಿಸಲಾಗುವುದು. ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು. ಕಸ ಸಂಗ್ರಹಣೆ ಮಾಡಲು 30 ಹೊಸ ಮತ್ತು 54 ಹೊರಗುತ್ತಿಗೆ ಆಧಾರದ ಮೇಲೆ ಟ್ರ್ಯಾಕ್ಟರ್ ಗಳನ್ನು ತೆಗೆದುಕೊಳ್ಳಲಾಗುವುದು. ಡಿಜಿಟಲ್ ಬೋರ್ಡ್ ಮೂಲಕ ಜಾಹೀರಾತು ಬಿತ್ತರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನೈರುತ್ಯ ರೈಲ್ವೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹಿರಿಯ ಪರಿಸರ ಅಧಿಕಾರಿ ಸಯ್ಯದ್ ಖಾಜಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ, ಬಿಆರ್ ಟಿಸಿ ಸಂಸ್ಥೆಯ ಸಹಾಯಕ ಮುಖ್ಯ ಇಂಜಿನಿಯರ್ ಮುಸ್ತಾಕ ಬಿಜಾಪುರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಎಸ್.ಬಿ. ಚನ್ನಪ್ಪಗೌಡರ, ಟಿ.ಎಲ್. ಶ್ರೀನಾಥ್, ಕಿರಣಕುಮಾರ ಬಸಾಪುರ, ಪ್ರವೀಣ, ಮುಖ್ಯ ಕಾಮಗಾರಿ ಅಭಿಯಂತರಾದ ಪ್ರಕಾಶ ಕಬಾಡಿ, ಸೋಮಶೇಖರ ಹಿರೇಗೌಡ್ರ, ಎಸ್.ಆರ್. ಪಾಟೀಲ, ಆನಂದ ಕಲ್ಲೋಳಿಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here