ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಳಪೆ ಬೀಜ ಮಾರುತ್ತಿದ್ದ ಗೋದಾಮಿನ ಮೇಲೆ ನೆಪ ಮಾತ್ರಕ್ಕೆ ದಾಳಿ ನೆಡೆಸಿದ ಕೃಷಿ ಅಧಿಕಾರಿಗಳು ಕಳಪೆ ಬೀಜ ಮಾರುತ್ತಿದ್ದ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಸುಮ್ಮನಾಗಿವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಿಲ್ಲೆಯ ಗಂಗಾವತಿಯ ಸಹಾಯಕ ಕೃಷಿ ನಿರ್ದೇಶಕರ ವ್ಯಾಪ್ತಿಗೆ ಬರುವ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಮಲ್ಲನಗೌಡ ಮಲ್ಕಾಜಪ್ಪ ಹೊಸಮನಿ ಎಂಬ ವ್ಯಕ್ತಿಯು ಅದೇ ಗ್ರಾಮದ ಎ.ಪಿ.ಎಮ್.ಸಿ.ಯ ಯಾಡ್೯ ನಲ್ಲಿರುವ ರೈತ ಸಪರ್ಕ ಕೇಂದ್ರದ ಎದುರುಗಡೆನೇ ಇರುವ ನಂ:02ರ ಗೋದಾಮಿನಲ್ಲಿ ಸುಮಾರು 450 ಚೀಲ ಭತ್ತದ ಕಳಪೆ ಬೀಜಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದನ್ನು ಅಧಿಕೃತ ಮಾಹಿತಿಯೊಂದಿಗೆ ತಿಳಿದು ಕೊಂಡ ಕೃಷಿ ಅಧಿಕಾರಿಗಳು, ಕಳಪೆ ಬೀಜಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಗೋದಾಮಿನ ಮೇಲೆ ನೆಪ ಮಾತ್ರಕ್ಕೆ ದಾಳಿ ಮಾಡಿದ್ದಾರೆ. ನಂತರ ಕಳಪೆ ಬೀಜ ಮಾರುತ್ತಿದ್ದ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಕೃಷಿ ಅಧಿಕಾರಿಗಳು ಆತನ ಮೇಲೆ ಯಾವುದೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೇ ಬಿಟ್ಟು, ಸುಮ್ಮನಾಗಿದ್ದಾರೆ.
ಈತನ ಈ ಕಳ್ಳ ವ್ಯವಾಹರವು ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೈತ ಸಂಪರ್ಕ ಕೇಂದ್ರದ ಮುಂದುಗಡೆ ಇರುವ ಗೋದಾಮಿನಲ್ಲಿಯೇ ನೆಡೆಯುತ್ತಾ ಬಂದಿದೆ. ಈ ಬಗ್ಗೆ ಸಂಬಂಧಿಸಿದಂತೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ಸಹಾಯಕ ಕೃಷಿ ನಿರ್ದೇಶಕರು, ಜೆಂಟಿ ನಿರ್ದೇಶಕರು ಇವರುಗಳಿಗೆ ಸಾಕಷ್ಟು ಜನ ಸಾಕಷ್ಟು ಬಾರಿ ತಿಳಿಸಿದರೂ ಸಹ ಮತ್ತು ನಿತ್ಯವೂ ಕಳಪೆ ಬೀಜ ಮಾರುತ್ತಿರುವುದನ್ನು ತಮ್ಮ ಕಣ್ಣಾರೆ ಕಂಡರೂ ಸಹ ಈ ಅಧಿಕಾರಿಗಳು ಮೌನವಾಗಿದ್ದಾರೆ. ಅಧಿಕಾರಿಗಳ ಈ ನಡೆ ಯಾಕೆ ಎನ್ನುವುದು ಜನಗಳನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ ಯಾಗಿದೆ.
ಗಂಗಾವತಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಕಳೆದ ಹಲವು ವರ್ಷಗಳಿಂದ ಈ ತರಹ ನಿರಂತರವಾಗಿ ಕಳಪೆ ಬೀಜ, ಕಳಪೆ ರಸಗೊಬ್ಬರ, ಕಳಪೆ ಕ್ರಿಮಿನಾಶಕಗಳನ್ನು ಸಾಕಷ್ಟು ವ್ಯಕ್ತಿಗಳು ತಮ್ಮ ಕಳ್ಳ ಮಾರ್ಗದಿಂದ ಮಾರಾಟ ಮಾಡುತ್ತಿದ್ದಾರೆ, ಅವರುಗಳು ಮಾರುವ ಈ ಕಳಪೆ ಬೀಜಗಳಗೆ ಯಾವುದೇ ರೀತಿಯ ಬ್ರಾಂಡ್, ಲೇಬಲ್ ಇರುವುದಿಲ್ಲಾ ಮತ್ತು ಬಿಲ್ಲುಗಳನ್ನು ಸಹ ಕೊಡುವುದಿಲ್ಲಾ, ತಾವು ರೈತರು ತಮ್ಮ ಭೂಮಿಯಲ್ಲಿ ಫಾರ್ಮಿಂಗ್ ಮಾಡಿ, ಬೆಳೆದ ಬೀಜಗಳಾಗಿವೆ ಎಂದು ಸುಳ್ಳು ಹೇಳಿ ಮಾರುತ್ತಿದ್ದಾರೆ. ಇದರಿಂದಾಗಿ ರೈತರಿಗೆ ನಿರಂತರವಾಗಿ ಮೋಸವಾಗುತ್ತಾ ಬಂದಿದೆ. ಈ ಕಳಪೆ ಬೀಜಗಳಿಂದ ಸರಿಯಾಗಿ ಬೆಳೆ ಬಬರುವುದಿಲ್ಲಾ, ಇಳುವರಿಯೂ ಸಹ ಬರುವುದಿಲ್ಲಾ, ಹೀಗಾಗಿ ರೈತರು ಸಾಕಷ್ಟು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಈ ಕಳಪೆ ಬೀಜ ಖರೀದಿ ಮಾಡಿ ಸಂಕಷ್ಟಕ್ಕೆ ಈಡಾದ ರೈತರು ಬಿಲ್ ಇಲ್ಲದೇ ಇರುವುದರಿಂದ ಕಳಪೆ ಬೀಜ ಮಾರಿದವರ ವಿರುದ್ಧ ಕಾನೂನು ಹೋರಾಟ ಮಾಡುವುದಕ್ಕೆ ಬರುವುದಿಲ್ಲಾ, ಹೀಗಾಗಿ ಮುಗ್ದ ರೈತರು ಈ ಕಳಪೆ ಬೀಜ ಮಾರುವ ವ್ಯಕ್ತಿಗಳ ಕುತಂತ್ರಕ್ಕೆ ಬಲಿಯಾಗಿ,ಹಾಳಾಗಿ ಹೋಗುತ್ತಿದ್ದಾರೆ. ಈ ಎಲ್ಲಾ ವಿಷಯಗಳು ಗೊತ್ತಿದ್ದರೂ ಸಹ ಕೃಷಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಈ ಕಳಪೆ ಬೀಜ ಮಾರುವ ವ್ಯಕ್ತಿಗಳ ವಿರುದ್ಧ ಶಿಸ್ತು ಕಾನೂನು ಕ್ರಮಕ್ಕೆ ಆದೇಶ ನೀಡದಿರುವುದು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.
ಕ್ರಮ ಕೈಗೊಳ್ಳದೇ ಇರುವುದಕ್ಕೆ ಅಧಿಕಾರಿಗಳ ಕೈವಾಡ ಇದೆಯಾ ಅಥವಾ ಪ್ರಭಾವಿಗಳ ಬೆಂಬಲವಿದೆಯಾ ಎಂದು ಜನಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು, ಮುಗ್ದ ರೈತರನ್ನು ರಕ್ಷಿಸಬೇಕು, ಇಲ್ಲವಾದಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಬ್ರಾಂಡ್, ಲೇಬಲ್ ಹಾಗೂ ಬಿಲ್ ಇಲ್ಲದೇ ಕಳಪೆ ಬೀಜ ಮಾರುವ ವ್ಯಕ್ತಿಗಳ ವಿರುದ್ಧ ಮತ್ತು ಅವರನ್ನು ರಕ್ಷಿಸುವ ಕೃಷಿ ಅಧಿಕಾರಿಗಳು ಮತ್ತು ಕ್ರಮಕ್ಕೆ ಆದೇಶ ನೀಡದ ಕೃಷಿ ಸಚಿವ ಬಿ.ಸಿ.ಪಾಟೀಲರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಅವರು ಎಚ್ಚರಿಸಿದ್ದಾರೆ.