ಶಿವಮೊಗ್ಗ, ಆಗಸ್ಟ್ 02: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯದಡಿ ಬರುವ ನೆಹರು ಯುವ ಕೇಂದ್ರ, ಶಿವಮೊಗ್ಗ ಇವರ ವತಿಯಿಂದ ಆಗಸ್ಟ್ 1 ರಿಂದ 15 ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಚತಾ ಪಾಕ್ಷಿಕ(ಪಖವಾಡ) ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಸ್ವಚ್ಚತಾ ಪಾಕ್ಷಿಕದ ಮೊದಲನೇ ದಿನವಾದ ಆಗಸ್ಟ್ 1 ರಂದು ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮಗಳ ಯುವ ಸಂಘದ ಸದಸ್ಯರು ಮತ್ತು ಯುವ ಸ್ವಯಂ ಸೇವಕರು ಸ್ವಚ್ಚತಾ ಪ್ರತಿಜ್ಞೆಯನ್ನು ತೆಗೆದುಕೊಂಡರು. ಹಾಗೂ ಸ್ವಚ್ಚತೆಯ ಮಹತ್ವದ ಸಂದೇಶ ಸಾರುವ ಸಲುವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡರು.
ನೆಹರು ಯುವ ಕೇಂದ್ರ ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮದ ಮೂಲಕ ಗ್ರಾಮಗಳಲ್ಲಿ ಸ್ವಚ್ಚತೆ, ಗೋಡೆ ಚಿತ್ರಕಲೆ, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಅಭಿಯಾನದಂತಹ ಕಾರ್ಯಕ್ರಮಗಳನ್ನು ಯುವ ಸಂಘ/ಯುವತಿಯರ ಮಂಡಳಿ ಮತ್ತು ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ನಡೆಸಲಿದ್ದು ಈ ಮೂಲಕ ಗಾಂಧೀಜಿಯವರು ಸ್ವಚ್ಚತೆಯ ಮಹತ್ವ ಕುರಿತು ಸಾರಿದ ಸಂದೇಶವನ್ನು ಎಲ್ಲರಿಗೂ ತಲುಪಿಸಿ ಜಿಲ್ಲೆಯ ಎಲ್ಲ ಯುವಜನತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ, ಸುಂದರ ಹಾಗೂ ಹಸಿರಾಗಿರಿಸಿಕೊಳ್ಳಲು ಪ್ರೇರಣೆ ನೀಡಲಾಗುವುದು ಎಂದು ನೆಹರು ಯುವ ಕೇಂದ್ರದ ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್ ಕೆಟಿಕೆ ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ಕಾರ್ಯಕರ್ತರಾದ ಸಾಗರ ತಾಲ್ಲೂಕಿನಿಂದ ಗಿರೀಶ, ರಶ್ಮಿ ಪ್ರದೀಪ್ ಭಟ್, ಭದ್ರಾವತಿ ತಾಲ್ಲೂಕಿನಿಂದ ಅವಿನಾಶ್, ಶಿಕಾರಿಪುರ ತಾಲ್ಲೂಕಿನಿಂದ ಜಗದೀಶ್ ಮತ್ತು ಮಾಲ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಿಂದ ಶಿವಕುಮಾರು ಪಾಕ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಚತಾ ಪ್ರತಿಜ್ಞೆ ಬೋಧಿಸಿದರು.