ದಾವಣಗೆರೆ, ಡಿ.24: ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 18 ಪ್ರಕರಣಗಳನ್ನು ದಾಖಲಿಸಿ, 3000 ರೂ. ದಂಡ ವಿಧಿಸಲಾಗಿದೆ.
ಜಿಲ್ಲೆಯಾದ್ಯಂತ ಶೈಕ್ಷಣಿಕ ಸಂಸ್ಥೆಯ 100 ಗಜದ ಒಳಗೆ ಇರುವ ತಂಬಾಕು ಉತ್ಪನ್ನಗಳ ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕಾಯ್ದೆ 4 ರನ್ವಯ 10 ಪ್ರಕರಣ ವರದಿಯಾಗಿದ್ದು, 1600 ರೂ ದಂಡ ವಸೂಲಿಯಾಗಿದೆ. ಕಾಯ್ದೆ 6ಎ ರನ್ವಯ 04 ಪ್ರಕರಣ ದಾಖಲಾಗಿದ್ದು, 600 ರೂ., ಕಾಯ್ದೆ 6ಬಿ ರನ್ವಯ 04 ಕೇಸ್ ದಾಖಲಾಗಿದ್ದು 800 ರೂ. ದಂಡ ಸೇರಿದಂತೆ ತಂಬಾಕು ದಾಳಿಯಲ್ಲಿ ಒಟ್ಟು 3000 ರೂ. ದಂಡ ವಸೂಲಿಯಾಗಿದೆ. ಹಾಗೂ ಪೊಲೀಸ್ ಇಲಾಖೆ ವತಿಯಿಂದ 10 ಪ್ರಕರಣ ವರದಿಯಾಗಿದ್ದು, ರೂ.1000 ದಂಡ ವಸೂಲಿಯಾಗಿದೆ.
ದಾಳಿಯಲ್ಲಿ ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಧುಶ್ರೀ, ಆರೋಗ್ಯ ನಿರೀಕ್ಷಕ ಶ್ರೀಶೈಲಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಓಬಳೇಶ ನಾಯಕ, ಸಹಾಯಕ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಹಾಗೂ ಮಹಾನಗರಪಾಲಿಕೆ ದಫೇದಾರ ಶ್ರೀಧರಮೂರ್ತಿ ಹಾಗೂ ಕರಿಬಸಪ್ಪ ಹಾಜರಿದ್ದರು.