ಬಳ್ಳಾರಿ,ಆ.11: ನರೇಗಾ ಯೋಜನೆಯಡಿ ಬಳ್ಳಾರಿ ಮತ್ತು ಕೊರ್ಲಗುಂದಿ ಹೋಬಳಿ ಮಟ್ಟದ ರೈತ ಬಂಧು ಅಭಿಯಾನ ಕಾರ್ಯಕ್ರಮ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಸಪ್ಪ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಎರೆಹುಳು ಗೊಬ್ಬರ ತಯಾರಿಕೆ ಉತ್ತೇಜಿಸುವ ದೃಷ್ಟಿಯಿಂದ ನರೇಗಾ ಯೋಜನೆಯಡಿ ಆ.15 ರಿಂದ ಅಕ್ಟೋಬರ್ 15 ರವರಗೆ 2 ತಿಂಗಳ ಅವಧಿಯಲ್ಲಿ ಬಳ್ಳಾರಿ ತಾಲೂಕು ಪಂಚಾಯತಿಯು ಕೃಷಿ ಇಲಾಖೆಯ ಸಹಯೋಗದಲ್ಲಿ ಬಳ್ಳಾರಿ ತಾಲೂಕಿನ 25 ಗ್ರಾಪಂ ವ್ಯಾಪ್ತಿಯಲ್ಲಿ ರೈತ ಬಂಧು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 50 ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ಉದ್ದಶೀಸಲಾಗಿದ್ದು, ತಾಲೂಕು ವ್ಯಾಪ್ತಿಯ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ಎರೆಹುಳು ತೊಟ್ಟಿ ನಿರ್ಮಾಣದಲ್ಲಿ ಆಸಕ್ತಿ ಇರುವ ರೈತರು ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಅಥವಾ ಕಾಯಕ ಮಿತ್ರ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಬಸವರಾಜ, ಸಂಜೀವರಾಯನ ಕೋಟೆ, ಹಲಕುಂದಿ, ಕೊಳಗಲ್ಲು, ಕಪ್ಪಗಲ್ಲು, ಬೆಳಗಲ್ಲು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾದ್ಯಾಕ್ಷರು ಹಾಗೂ ಸರ್ವ ಸದಸ್ಯರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾ.ಉ) ತೋಟಗಾರಿಕೆ ಇಲಾಖೆ ಮತ್ತು ಪಶುಸಂಗೋಪನ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಟಿಐಇಸಿ, ಮೇಟಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.