ಹುಬ್ಬಳ್ಳಿ : ಮೇ.13: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ. ಅವರು ಇಂದು ನವಲಗುಂದಕ್ಕೆ ಭೇಟಿ ನೀಡಿ, ತರಹದ ಕಚೇರಿ,ತಾಲೂಕು ಆಸ್ಪತ್ರೆ,ಪೊಲೀಸ್ ಠಾಣೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿ,ತಾಲೂಕು ಪಂಚಾಯತ ಕಾರ್ಯಾಲಯ ಹಾಗೂ ತಹಸೀಲ್ದಾರ ಕಚೇರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲುಗಳಿಗೆ ಆಕಸ್ಮಿಕ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದರು.
ಕೌಟುಂಬಿಕ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ವರದಿಗಳನ್ನು ನ್ಯಾಯಾಲಯಗಳಿಗೆ ತ್ವರಿತವಾಗಿ ತಲುಪಿಸಲು ಸಿಡಿಪಿಓ ಅವರಿಗೆ ನಿರ್ದೇಶನ ನೀಡಿದರು.ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ಭಾಗಗಳಲ್ಲಿ ನೈರ್ಮಲ್ಯ ಕಾಪಾಡುವುದು,ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಔಷಧೋಪಚಾರ ಕಲ್ಪಿಸಲು ಸೂಚಿಸಿದರು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಕಾನೂನು ಸೇವಾ ಸಮಿತಿಗಳ ಪ್ಯಾನಲ್ ವಕೀಲರ ಉಚಿತ ನೆರವು ಪಡೆಯಲು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ತಹಸೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಆಡಳಿತಾಂಗ ತ್ವರಿತ ಸ್ಪಂದನೆ ನೀಡಲು ತಿಳಿಸಿದರು.ಹಾಸ್ಟೆಲುಗಳಲ್ಲಿ ಮಕ್ಕಳ ಅಹವಾಲುಗಳನ್ನು ಆಲಿಸಿದರು.
ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಮುಂಬರುವ ಲೋಕ ಅದಾಲತ್ ಕುರಿತು ಚರ್ಚಿಸಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಶ್ರಮಿಸಲು ಕೋರಿದರು.