2ನೇ ಅಲೆಯಲ್ಲಿ 60 ಸಾವಿರ ಪ್ರಕರಣ;3ನೇ ಅಲೆಯಲ್ಲಿ 1ಲಕ್ಷಕ್ಕೇರುವ ಸಾಧ್ಯತೆ ಕೋವಿಡ್ 3ನೇ ಅಲೆ ತಡೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಮಾಲಪಾಟಿ

0
130

ಬಳ್ಳಾರಿ,ಆ.01: ಕೋವಿಡ್ 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ಅಗತ್ಯ ಬೆಡ್‍ಗಳ ವ್ಯವಸ್ಥೆ,ಔಷಧೀಯ ವ್ಯವಸ್ಥೆ,ಮನೆ-ಮನೆ ಸಮೀಕ್ಷೆ,ಆರಂಭಿಕ ಹಂತದಲ್ಲಿಯೇ ಸೊಂಕು ಪತ್ತೆಹಚ್ಚಿ ಚಿಕಿತ್ಸೆ ನೀಡುವಿಕೆ,ಎಸ್‍ಎಂಎಸ್ ಕಟ್ಟುನಿಟ್ಟಿನ ಪಾಲನೆ, ನಿರ್ಬಂಧಗಳ ಪರಿಣಾಮಕಾರಿ ಜಾರಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಸೊಂಕು ವ್ಯಾಪಿಸುತ್ತಿದೆ.ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳೊಂದಿಗೆ ಈಗಾಗಲೇ ವಿಡಿಯೋ ಸಂವಾದ ನಡೆಸಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಸ್ಥಳೀಯ ಸ್ಥಿತಿಗತಿ ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಅವರು ಸೂಚನೆ ನೀಡಿದ್ದು,ಅದರನ್ವಯ ನಮ್ಮ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕೋವಿಡ್ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 60 ಸಾವಿರ ಪ್ರಕರಣಗಳು ದಾಖಲಾಗಿದ್ದವು; 8 ಸಾವಿರ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು; ಸೊಂಕಿತರ ಸಂಖ್ಯೆ 3ನೇ ಅಲೆಯಲ್ಲಿ 1ಲಕ್ಷಕ್ಕೇರುವ ಸಾಧ್ಯತೆ ಇದೆ. ಇಷ್ಟು ಪ್ರಕರಣಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ 20 ಸಾವಿರ ಕೋವಿಡ್ ಕಿಟ್,15 ಸಾವಿರ ರೆಮಡಿಸಿವರ್ ಲಸಿಕೆ ಸೇರಿ ಅಗತ್ಯ ಔಷಧಿಗಳು ಸಮರ್ಪಕವಾಗಿ ನಮ್ಮಲ್ಲಿವೆ;ಬಳ್ಳಾರಿ ಜಿಲ್ಲಾಸ್ಪತ್ರೆ,ವಿಮ್ಸ್,ಟ್ರಾಮಾಕೇರ್,ಹೊಸಪೇಟೆ ಎಂಸಿಎಚ್ ಆಸ್ಪತ್ರೆ,ಹರಪನಳ್ಳಿ,ಹಡಗಲಿ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯವಾದ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ,ವಿಮ್ಸ್,ಟ್ರಾಮಾಕೇರ್‍ಗಳಲ್ಲಿ ಐಸಿಯು ಬೆಡ್‍ಗಳ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ ಮತ್ತು ಅಗತ್ಯ ಪ್ರಮಾಣದ ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಕೊರೊನಾ ಸೊಂಕಿತರಿಗಾಗಿ ಜಿಂದಾಲ್ ಬಳಿಯ ತೋರಣಗಲ್ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ ಮುಂದುವರಿಸಲಾಗುವುದು ಎಂದರು.

ವಿಶಾಲ ಮೈದಾನಗಳಿಗೆ ತರಕಾರಿ/ಹಣ್ಣು ಮಾರುಕಟ್ಟೆ ಸ್ಥಳಾಂತರ: ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಂತೆ ಈ ಬಾರಿಯೂ ಜನಸಂದಣಿ ಹೆಚ್ಚಿರುವ ತರಕಾರಿ ಮತ್ತು ಹಣ್ಣು ಮಾರುಕಟ್ಟೆಗಳ ಮಾರಾಟಗಾರರನ್ನು ವಿಶಾಲ ಮೈದಾನಗಳಿಗೆ ಸ್ಥಳಾಂತರಿಸಲಾಗುವುದು. ಬಳ್ಳಾರಿ ಮತ್ತು ಹೊಸಪೇಟೆ ನಗರಗಳ ವಿಶಾಲ ಮೈದಾನದಲ್ಲಿ ಮುಂದಿನ ವಾರ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ವಿವರಿಸಿದರು.
ಕೊರೊನಾ ಸೊಂಕಿನ ಪ್ರಕರಣಗಳು ಹೆಚ್ಚು ವರದಿಯಾಗಿರುವ ಬಳ್ಳಾರಿಯ ಹುಸೇನ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆ.2ರಿಂದಲೇ ಮನೆ-ಮನೆ ಸಮೀಕ್ಷೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ವಾರ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ 3ನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗುವುದು ಎಂದರು.

ಅಗತ್ಯ ಬಿದ್ದರೇ ಹೆಚ್ಚಿನ ಸಂಖ್ಯೆಯಲ್ಲಿ ಫೀವರ್ ಕ್ಲಿನಿಕ್‍ಗಳ ಸ್ಥಾಪನೆ: ಜ್ವರ,ಕೆಮ್ಮು,ನೆಗಡಿ ಬಂದರೇ ನಿರ್ಲಕ್ಷ್ಯ ವಹಿಸದೇ ಫೀವರ್ ಕ್ಲಿನಿಕ್‍ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ಮನವಿ ಮಾಡಿದ ಡಿಸಿ ಮಾಲಪಾಟಿ ಅವರು ಈ ರೀತಿಯ ನಿರ್ಲಕ್ಷ್ಯ ವಹಿಸಿದ್ದಕ್ಕೆ 1 ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಸ್ಥಿತಿ ಎದುರಿಸಿದೆವು ಎಂಬುದು ನಮಗೆಲ್ಲಾ ಗೊತ್ತಿದೆ ಎಂದರು.
ಸಾರ್ವಜನಿಕರೊಂದಿಗೆ ಪ್ರತಿನಿತ್ಯ ವ್ಯವಹರಿಸುವಾಗ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು;ಇಲ್ಲದಿದ್ದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮೊದಲ ಡೋಸ್ ಅನ್ನು 8.50ಲಕ್ಷ ಜನ ಪಡೆದುಕೊಂಡಿದ್ದಾರೆ 2.40ಲಕ್ಷ ಜನರು 2ನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ವಿವರಿಸಿದ ಅವರು ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು;ಕೊರೊನಾ ಎದುರಿಸಲು ಲಸಿಕೆಯೇ ಮದ್ದು ಎಂದರು.
ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ,ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಡಿಸಿ ಮಾಲಪಾಟಿ ಅವರು ಎಸ್‍ಎಂಎಸ್ ಪಾಲಿಸದೇ ನಿಯಮಗಳು ಉಲ್ಲಂಘಿಸಿದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ಸೂಚಿಸಲಾಗಿದೆ ಎಂದರು.
ಇನ್ನೂ ಹೆಚ್ಚಿನ ಪ್ರಮಾಣದ ನಿರ್ಬಂಧಗಳನ್ನು ಮುಂದಿನ ವಾರ ಜಾರಿಗೆ ತರಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಲಾಕ್‍ಡೌನ್ ಮುಗಿದಿದೆ ಎಂದರೇ ಕೊರೊನಾ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಎಸ್‍ಎಂಎಸ್ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್‍ಎಂಎಸ್ ಕುರಿತು ಜಾಗೃತಿ ಮತ್ತು ಕಡ್ಡಾಯ ಪಾಲನೆ ಕುರಿತು ಪೊಲೀಸ್,ಕಂದಾಯ,ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಾಚರಣೆಗಳನ್ನು ನಾಳೆಯಿಂದ ನಡೆಸಲಾಗುವುದು ಎಂದರು.
ಮುಂದಿನ ವಾರ ಸ್ಥಿತಿಗತಿ ನೋಡಿಕೊಂಡು ಗಡಿಪ್ರದೇಶಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದು ವಿವರಿಸಿದ ಅವರು 2ನೇ ಅಲೆಯ ಸಂದರ್ಭದಲ್ಲಿ 18 ಸಾವಿರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್,ಸಹಾಯಕ ಆಯುಕ್ತ ಆಕಾಶ ಶಂಕರ್,ಡಿಎಚ್‍ಒ ಡಾ.ಜನಾರ್ಧನ್,ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮತ್ತಿತರರು ಇದ್ದರು.
ಇದಕ್ಕೂ ಮುಂಚೆ ಜಿಲ್ಲಾಧಿಕಾರಿಗಳು ಕೋವಿಡ್ 3ನೇ ಅಲೆ ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

LEAVE A REPLY

Please enter your comment!
Please enter your name here