ಧಾರವಾಡ ಆ.13: ಭಾರತ ಸಂವಿಧಾನವು ನೀಡಿದ ಮೂಲಭೂತ ಹಕ್ಕು, ಕರ್ತವ್ಯ, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ನಾವು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಹೇಳಿದರು.
ಜಿಲ್ಲಾಡಳಿತ ಹಾಗೂ ರಂಗಾಯಣವು ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಇಂದು ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನದಲ್ಲಿ ಆಯೋಜಿಸಿದ್ದ ರಂಗಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಜನ ಹೋರಾಟಗಾರರು ಸ್ವಾರ್ಥವನ್ನು ಮೀರಿ ನಾಡಿಗಾಗಿ ತಮ್ಮ ಪ್ರಾಣವನ್ನೇ ಬಲಿ ನೀಡಿ, ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಹಾಗೆಯೇ ಕರ್ನಾಟಕ ಏಕೀಕರಣವು ಒಂದು ಮಹತ್ವದ ಚಳುವಳಿಯಾಗಿತ್ತು. ಕನ್ನಡಕ್ಕೆ ತನ್ನದೇ ಆದ ವಿಶಿಷ್ಠತೆ ಇದೆ. ಎರಡು ಸಾವಿರ ವರ್ಷಗಳ ಇತಿಹಾಸವನ್ನು ಅದು ಪಡೆದುಕೊಂಡಿದೆ ಎಂದು ಡಾ.ಹಿರೇಮಠ ತಿಳಿಸಿದರು.
ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅನೇಕ ಹೋರಾಟಗಾರರನ್ನು ಇಂದು ಸ್ಮರಿಸುವುದರ ಜತೆಗೆ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸವನ್ನು ತಂದಿದೆ. ಸರ್ಕಾರವು ಬಯಲು ರಂಗಮಂದಿರವನ್ನು ಉನ್ನತೀಕರಣಗೊಳಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಬಯಲು ರಂಗಮಂದಿರವು ಹೆಚ್ಚು ಆಕರ್ಷಿತವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಮಕ್ಕಳ ಸಾಹಿತಿ ಕೆ.ಎಚ್. ನಾಯಕ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ಹೇಮಾ ವಾಘ್ಮೋಡೆ , ಹಿಂದೂಸ್ತಾನಿ ಗಾಯಕರಾದ ಅರ್ಚನಾ ಕೆ. ಅವರು ಉಪಸ್ಥಿತರಿದ್ದರು.
ಪ್ರತೀಕ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಡಾ. ಗೋಪಾಲಕೃಷ್ಣ ಬಿ ಸ್ವಾಗತಿಸಿದರು. ರಂಗಾಯಣದ ರೆಪರ್ಟರಿ ಕಲಾವಿದರು ನಾಡಗೀತೆ, ದೇಶಭಕ್ತಿಗೀತೆ ಹಾಗೂ ರಂಗಸಂಗೀತವನ್ನು ಪ್ರಸ್ತುತ ಪಡಿಸಿದರು.