ಹುಣಸೂರು:ಆಗಸ್ಟ್:13.ತಾಲೂಕಿನ ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆಯೊಂದು ಕಾದಾಟದಲ್ಲಿ ಸಾವನ್ನಪ್ಪಿದೆ. ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಿಂದ ಮೇವನ್ನರಸಿ ಹೊರ ದಾಟಿದ್ದ ಕಾಡಾನೆಗಳ ಹಿಂಡು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮಣ ,ಗಣೇಶ್ರಿಗೆ ಸೇರಿದ ಮರಗೆಣಸು ಮತ್ತು ಬಾಳೆ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿವೆ.
ಈ ನಡುವೆ ಉದ್ಯಾನಕ್ಕೆ ವಾಪಸ್ ಹೋಗುವ ವೇಳೆ ಆನೆಗಳ ನಡುವೆ ಕಾದಾಟ ನಡೆದಿದೆ. ಸಾವನ್ನಪ್ಪಿರುವ ಸುಮಾರು 28-30 ವರ್ಷದ ಆನೆಯ ಹಿಂಬಾಗದ ತೊಡೆ ಬಳಿಯಲ್ಲಿ ತೀವ್ರಗಾಯವಾಗಿದ್ದು, ಟಿಬೇಟ್ ಕ್ಯಾಂಪಿನ ಎನ್.ವಿಲೇಜ್ನ ಹೊಂಡಾರಿಗೆ ಸೇರಿದ ಜಮೀನಿನ ಬೇಲಿ ಬಳಿ ಕುಸಿದು ಬಿದ್ದು ಸಾವನ್ನಪ್ಪಿದೆ.
ಶುಕ್ರವಾರ ಮುಂಜಾನೆ ಟಿಬೇಟ್ನ ಜಮೀನಿನಲ್ಲಿ ಆನೆ ಶವ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಹುಣಸೂರು ಎಸಿಎಫ್ ಸತೀಶ್, ಆರ್.ಎಫ್.ಓ.ನಮನ್ ನಾರಾಯಣ್ ನಾಯಕ್, ಎಸ್ಟಿಪಿಎಫ್ ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ನಾಗರಹೊಳೆ ಉದ್ಯಾನದ ಪಶುವೈದ್ಯ ಡಾ.ರಮೇಶ್ ಶವಪರೀಕ್ಷೆ ನಡೆಸಿದ ನಂತರ ಸ್ಥಳದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.
ಜನಜಂಗುಳಿ: ಆನೆ ಸಾವನ್ನಪ್ಪಿರುವ ವಿಷಯ ಹರಡುತ್ತಿದ್ದಂತೆ ಸುತ್ತ ಮುತ್ತಲ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಶವ ವೀಕ್ಷಿಸಿದರು. ಮಕ್ಕಳಂತೂ ಆನೆ ಶವವನ್ನು ಮುಟ್ಟಿ ಮರುಕ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಗ್ರಾಮಾಂತರ ಠಾಣೆ ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಿದರು.