ಕನ್ನಡ ಚಲನಚಿತ್ರರಂಗದ ಶ್ರೇಷ್ಠ ಗೀತರಚನಕಾರ ಆರ್.ಎನ್. ಜಯಗೋಪಾಲ್ ಹುಟ್ಟು ಹಬ್ಬಕ್ಕೆ ಹೃದಯಪೂರ್ವಕ ನಮನ

0
116

ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಆರ್.ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂದೆ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್. ನಾಗೇಂದ್ರರಾಯರು. ಅವರ ಇಡೀ ಕುಟುಂಬವೇ ಕಲಾವಂತಿಕೆ ತುಂಬಿ ತುಳುಕಿದ್ದು.ಅವರ ಸಹೋದರರಾದ ಸುದರ್ಶನ್ ಪ್ರಸಿದ್ಧ ನಟ. ಮತ್ತೊಬ್ಬ ಸಹೋದರ ಕೃಷ್ಣಪ್ರಸಾದ್ ಪ್ರಸಿದ್ಧ ಛಾಯಾಗ್ರಾಹಕ.

ತಮ್ಮ ತಂದೆಯವರು ನಿರ್ಮಿಸಿದ ಮೊದಲ ಚಿತ್ರ ‘ಪ್ರೇಮದ ಪುತ್ರಿ’ಗೆ ಆರ್.ಎನ್.ಜಯಗೋಪಾಲರು ಬರೆದ ಹಾಡು ‘ತ್ರಿಭುವನ ಜನನಿ ಜಗನ್ಮೋಹಿನಿ’. ಈ ಹಾಡು ಇಂದೂ ಕೂಡಾ ಜನರ ಮನದಲ್ಲಿ ನಲಿದು ಬರುತ್ತಿದೆ. ಮುಂದೆ ಕನ್ನಡದಲ್ಲಿ ನವ್ಯ ಸಾಹಿತ್ಯದ ಹಾಡುಗಳನ್ನು ಬರೆದ ಆರ್. ಎನ್. ಜಯಗೋಪಾಲರ ಬಹಳಷ್ಟು ಹಾಡುಗಳು ಶ್ರೇಷ್ಠ ಕವಿಯೊಬ್ಬನ ಕಲಾವಂತಿಕೆಯ ಪದಲಾಲಿತ್ಯವನ್ನು ಹೊರಸೂಸುವಂತದ್ದಾಗಿದೆ.

‘ನಾಂದಿ’ ಚಿತ್ರದ ‘ಹಾಡೊಂದ ಹಾಡುವೆ ನೀ ಕೇಳು ಮಗುವೆ’, ‘ಗೆಜ್ಜೆಪೂಜೆ’ ಚಿತ್ರದ ‘ಗಗನವು ಎಲ್ಲೋ ಭೂಮಿಯು ಎಲ್ಲೋ’, ‘ನಾಗರಹಾವು’ ಚಿತ್ರದ ‘ಕರ್ಪೂರದಾ ಬೊಂಬೆ ನಾನು’, ದಾರಿ ತಪ್ಪಿದ ಮಗ ಚಿತ್ರದ ‘ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ’ ಇವೆಲ್ಲಾ ಒಂದಾದ ಮೇಲೊಂದರಂತೆ ಮನಸ್ಸು ತುಂಬುತ್ತವೆ. ‘ಹೂವು ಚೆಲುವೆಲ್ಲಾ ನಂದೆಂದಿತು’, ‘ನೀರಿನಲ್ಲಿ ಅಲೆಯ ಉಂಗುರ’, ‘ಜೋಕೆ ನಾನು ಬಳ್ಳಿಯ ಮಿಂಚು’, ‘ಸನ್ಯಾಸಿ, ಸನ್ಯಾಸಿ ಅರ್ಜುನ ಸನ್ಯಾಸಿ’, ‘ವಹರ ಮೇರೆ ಮುರುಗ, ವಹರೆ ನನ್ನ ರಂಗ, ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ’, ‘ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು’ ಇವೆಲ್ಲಾ ಒಂದಕ್ಕಿಂತ ಒಂದು ಮಿಗಿಲಾದ ಶ್ರೇಷ್ಠ ವೈವಿಧ್ಯಗಳು.

‘ಬೆಳ್ಳಿ ಮೋಡದ ಆಚೆಯಿಂದ ಮೂಡಿ ಬಂದ ಮಿನುಗುತಾರೆ’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’, ‘ನಿನ್ನ ರೂಪ ಕಣ್ಣಲಿ’, ‘ಬಾಳೊಂದು ಭಾವಗೀತೆ’, ‘ಇವಳೇ ವೀಣಾಪಾಣಿ’, ‘ನೋಡು ನೋಡು ಕಣ್ಣಾರೆ ನಿಂತಿಹಳು’, ‘ಯಾವ ಹೂವು ಯಾರ ಮುಡಿಗೋ’, ‘ನಿನ್ನೊಲುಮೆ ನಮಗಿರಲಿ ತಂದೆ’, ‘ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು’, ‘ಸೋಬಾನ ಸೋಬಾನ ಸೋಬಾನವೇ’, ‘ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ’, ‘ನಗಬೇಕು ನಗಿಸಬೇಕು ಇದೇ ನನ್ನ ಧರ್ಮ’, ‘ನಗು ನಗುತಾ ನಲೀ ನಲೀ’, ‘ಹೂವೇ ಮರೆಸಿತು ಮೊಗವ’, ‘ಹಕ್ಕಿ ಹಾಡು ಚಿಲಿಪಿಲಿ ರಾಗ’ ಹೀಗೆ ಆರ್. ಎನ್. ಜಯಗೊಪಾಲರು ಬರೆದ ಒಂದೊಂದೂ ಹಾಡು ಶ್ರೇಷ್ಠತೆಯ ಸೊಬಗಿನದು. ಅವರು ಬರೆದ ಹಾಡುಗಳ ಸಂಖ್ಯೆ 1600ಕ್ಕೂ ಹೆಚ್ಚು.

ಆರ್. ಎನ್. ಜಯಗೋಪಾಲರ ಹಾಡುಗಳನ್ನು ಒಟ್ಟಾಗಿ ನೋಡಿದರೆ ಅದೊಂದು ಸುಂದರ ಗೀತಸಂಕಲನದಂತೆ. ಹೀಗೆ ಅವರ ಆಯ್ದ ಸುಂದರ ಚಲನಚಿತ್ರಗೀತೆಗಳ ಸಂಕಲನವನ್ನು ‘ನಗುವ ನಯನ ಮಧುರ ಮೌನ’ ಎಂಬ ಹೆಸರಿನಲ್ಲಿ ಎನ್. ಎಸ್. ಶ್ರೀಧರಮೂರ್ತಿ Sreedhara Murthy ಅವರು ವಸಂತ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ.

ಆರ್. ಎನ್. ಜಯಗೋಪಾಲ್ ಅವರು ಮಣಿರತ್ನಂ ಅವರ ನಾಯಗನ್ ಕನ್ನಡದ ಜೀವನದಿ ಅಂತಹ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 30 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ಧೂಮಕೇತು, ನಾ ಮೆಚ್ಚಿದ ಹುಡುಗ, ಕೆಸರಿನ ಕಮಲ, ಮುತ್ತು ಒಂದು ಮುತ್ತು, ಮರೆಯದ ಹಾಡು, ಮಕ್ಕಳೇ ದೇವರು, ಅವಳ ಅಂತರಂಗ, ಹೃದಯ ಪಲ್ಲವಿ ಚಿತ್ರಗಳನ್ನು ಆರ್. ಎನ್. ಜಯಗೋಪಾಲ್ ನಿರ್ದೇಶಿಸಿದ್ದರು.‘ಧೂಮಕೇತು’ ಅವರೇ ನಿರ್ಮಿಸಿದ ಚಿತ್ರ.

ತಮಿಳುನಾಡಿನ ಕಲೈಮಾಮಾಣಿ, ಕರ್ನಾಟಕದ ಹಲವಾರು ರಾಜ್ಯಪ್ರಶಸ್ತಿಗಳನ್ನು ಜಯಗೋಪಾಲ್ ಗಳಿಸಿದ್ದರು. ಇವೆಲ್ಲವನ್ನೂ ಮೀರಿಸಿದ್ದು ಆರ್. ಎನ್. ಜಯಗೋಪಾಲರು ತಮ್ಮ ಸೊಗಸಾದ ಹಾಡುಗಳ ಸವಿಯನ್ನು ನಮ್ಮ ಮನಸ್ಸಿನಲ್ಲಿ ತುಂಬಿ ಹೋಗಿರುವ ಪರಿ. ಆರ್. ಎನ್. ಜಯಗೋಪಾಲರು 2008ರ ಮೇ 19ರಂದು ಈ ಲೋಕವನ್ನಗಲಿದರು.ನಮ್ಮ ಈ ಜೀವ ಅಳಿಯುತ್ತದೆ. ಜೀವ ಅಳಿದ ಮೇಲೂ ಒಬ್ಬ ಮನುಷ್ಯನ ಕೆಲಸ ಉಳಿಯುತ್ತದಲ್ಲಾ, ಆ ಕೆಲಸ ಆ ಜೀವದ ಶ್ರೇಷ್ಠತೆಯನ್ನು ಹೇಳುತ್ತದೆ. ಆರ್. ಎನ್. ಜಯಗೋಪಾಲ್ ಅಂತಹ ಶ್ರೇಷ್ಠ ಜೀವ.ಈ ಶ್ರೇಷ್ಠತೆಗೆ ನಮ್ಮ ಹೃದಯಪೂರ್ವಕ ನಮನ

ಕೃಪೆ:-‘ಕನ್ನಡ ಸಂಪದ’

LEAVE A REPLY

Please enter your comment!
Please enter your name here